ಸ್ಫೂರ್ತಿವಾಣಿಗಳು ಸದಾ ಕಣ್ಣಿಗೆ ಬೀಳುವಂತಿದ್ದರೆ ಅವುಗಳೇ ಸಾಧನೆಗೆ " ಸ್ಫೂರ್ತಿ-ಚ್ಯತನ್ಯದ ಚಿಲುಮೆಗಳು"

Powered By Blogger

02 ಅಕ್ಟೋಬರ್ 2011

ಸ್ವಾಮಿ ವಿವೇಕಾನಂದರ ದಿವ್ಯ ವಾಣಿ

• ಯಾವುದಕ್ಕೂ ಅಂಜದಿರು; ಅಧ್ಭುತ ಕಾರ್ಯವನ್ನೆಸಗುವೆ. ಭೀತಿಯೇ ಪ್ರಪಂಚದ ಎಲ್ಲ ದುಃಖಗಳಿಗೂ ಮಹತ್ಕಾರಣ. ನಮ್ಮ ದುರವಸ್ಥೆಗಳಿಗೆಲ್ಲಾ ಭೀತಿಯೇ ಕಾರಣ. ನಿರ್ಭೀತಿಯೇ ಕ್ಷಣಮಾತ್ರದಲ್ಲಿ ಸ್ವರ್ಗವನ್ನು ಸಾಧಿಸಿಕೊಡಬಲ್ಲದು. ಆದುದರಿಂದ ಎದ್ದು ನಿಲ್ಲು, ಜಾಗೃತನಾಗು ಮತ್ತು ಗುರಿ ಪ್ರಾಪ್ತವಾಗುವವರೆಗೂ ನಿಲ್ಲದಿರು.


• ನಿಮ್ಮೊಬ್ಬರ ಮೇಲೆಯೇ ಇಡೀ ಕೆಲಸವೂ ಬಿದ್ದಿದೆಯೇನೋ ಎಂಬಂತೆ ನೀವು ಪ್ರತಿಯೊಬ್ಬರೂ ಕೆಲಸ ಮಾಡಿ. ಐವತ್ತಕ್ಕೂ ಹೆಚ್ಚು ಶತಮಾನಗಳು ನಿಮ್ಮನ್ನು ನೋಡುತ್ತ ನಿಂತಿವೆ. ಭಾರತದ ಭವಿಷ್ಯ ನಿಮ್ಮನ್ನು ಅವಲಂಬಿಸಿದೆ. ಕೆಲಸಮಾಡಿಕೊಂಡು ಹೋಗಿ.


• ಧರ್ಮದ ರಹಸ್ಯವಿರುವುದು ಸಿದ್ಧಾಂತಗಳಲ್ಲಲ್ಲ. ಅದರ ಅನುಷ್ಠಾನದಲ್ಲಿ. ಒಳ್ಳೆಯವರಾಗಿರುವುದು, ಒಳ್ಳೆಯದನ್ನು ಮಾಡುವುದು –ಇದೇ ಧರ್ಮದ ಸರ್ವಸ್ವ.


• ಮಾನವನಲ್ಲಿ ಈಗಾಗಲೇ ಅಡಗಿರುವ ದೈವತ್ವವನ್ನು ಪ್ರಕಾಶಪಡಿಸುವುದೇ ಧರ್ಮ.


• ಪ್ರಾಣಿಸಹಜ ವ್ಯಕ್ತಿಯನ್ನು ಮನುಷ್ಯನನ್ನಾಗಿಸಿ, ಮನುಷ್ಯನನ್ನು ದೇವರನ್ನಾಗಿಸುವ ಭಾವನೆಯೇ ಧರ್ಮ.


• ಯಾರಿಗೆ ತನ್ನಲ್ಲಿ ತನಗೇ ನಂಬಿಕೆಯಿಲ್ಲವೋ ಅವನು ನಾಸ್ತಿಕ. ಹಳೆಯ ಧರ್ಮಗಳು ಹೇಳಿದವು, ದೇವರನ್ನು ನಂಬದವನು ನಾಸ್ತಿಕ ಎಂದು. ಹೊಸ ಧರ್ಮವು ಹೇಳುತ್ತದೆ, ಯಾರಿಗೆ ತನ್ನಲ್ಲಿ ನಂಬಿಕೆಯಿಲ್ಲವೋ ಅವನು ನಾಸ್ತಿಕ ಎಂದು.


• ಈ ಜಗತ್ತಿನ ಇತಿಹಾಸ ಆತ್ಮಶ್ರದ್ಧೆಯನ್ನು ಹೊಂದಿದ್ದ ಕೆಲವೇ ವ್ಯಕ್ತಿಗಳ ಇತಿಹಾಸ. ಆ ಶ್ರದ್ಧೆ ಅಂತರಂಗದ ದಿವ್ಯತೆಯನ್ನು ಬಡಿದೆಬ್ಬಿಸುತ್ತದೆ. ಆಗ ನೀವೇನನ್ನು ಬೇಕಾದರೂ ಸಾಧಿಸಬಲ್ಲಿರಿ.


• ನೀವು ಯಶಸ್ಸನ್ನು ಪಡೆಯಲು ದೃಢ ಪ್ರಯತ್ನಬೇಕು, ಅಪಾರ ಇಚ್ಚಾಶಕ್ತಿ ಬೇಕು. ‘ನಾನು ಸಮುದ್ರವನ್ನೇ ಪಾನಮಾಡುತ್ತೇನೆ’, ಎಂದು ಪ್ರಯತ್ನಶೀಲನು ಹೇಳುತ್ತಾನೆ. ‘ನನ್ನ ಸಂಕಲ್ಪದ ಮುಂದೆ ಪರ್ವತಗಳೇ ಪುಡಿಪುಡಿಯಾಗುತ್ತವೆ’ ಎನ್ನುತ್ತಾನವನು. ಇಂತಹ ಶಕ್ತಿ ಯನ್ನೂ ಛಾತಿಯನ್ನೂ ಪಡೆಯಿರಿ; ಕಷ್ಟಪಟ್ಟು ದುಡಿಯಿರಿ, ನೀವು ಗುರಿ ಸೇರುವುದು ನಿಶ್ಚಯ.


• ಪ್ರತಿಯಾಗಿ ಏನನ್ನೂ ಬಯಸಬೇಡಿ. ಆದರೆ ನೀವು ಹೆಚ್ಚು ಕೊಟ್ಟಷ್ಟೂ ನಿಮಗೆ ಹೆಚ್ಚು ಬರುತ್ತದೆ.


• ವಿಕಾಸವೇ ಜೀವನ; ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ; ಸ್ವಾರ್ಥವೆಲ್ಲಾ ಸಂಕೋಚ; ಆದುದರಿಂದ ಪ್ರೇಮವೇ ಬದುಕಿನ ಧರ್ಮ.


• ಬುದ್ಧಿ ಶ್ರೇಷ್ಠವಾದುದು ನಿಜ. ಆದರ ಕಾರ್ಯವ್ಯಾಪ್ತಿ ಸೀಮಿತವಾದುದು. ಸ್ಫೂರ್ತಿ ಉಂಟಾಗುವುದು ಹೃದಯದ ಮೂಲಕ; ಹೃದಯವೇ ಸ್ಫೂರ್ತಿಯ ಮೂಲ.


• ವತ್ಸ, ಪ್ರೀತಿಗೆ ಸೋಲೆಂಬುದಿಲ್ಲ; ಇಂದೋ ನಾಳೆಯೋ ಅಥವಾ ಯುಗಾಂತರವೋ ಸತ್ಯ ಗೆದ್ದೇ ತೀರುವುದು. ಪ್ರೀತಿ ಖಂಡಿತ ಜಯ ಗಳಿಸುತ್ತದೆ. ನಮ್ಮ ಮಾನವಬಂಧುಗಳನ್ನು ನೀವು ಪ್ರೀತಿಸುತ್ತೀರೇನು?


• ಜೀವನಾವಧಿ ಅಲ್ಲ, ಪ್ರಾಪಂಚಿಕ ವಿಷಯಗಳೆಲ್ಲ ಕ್ಷಣಿಕ. ಆದರೆ ಯಾರು ಇತರರಿಗಾಗಿ ಬಾಳುತ್ತಾರೋ ಅವರೇ ನಿಜವಾಗಿ ಬಾಳುತ್ತಾರೆ. ಉಳಿದವರು ಜೀವನ್ ಮೃತರು.


• ಎದ್ದೇಳಿ ಕಾರ್ಯೋನ್ಮುಖರಾಗಿ, ಈ ಜೀವನವಾದರೂ ಎಷ್ಟು ಕಾಲ? ನೀವು ಈ ಜಗತ್ತಿಗೆ ಬಂದ ಮೇಲೆ ಏನಾದರೂ ಗುರುತನ್ನು ಬಿಟ್ಟು ಹೋಗಿ, ಅದಿಲ್ಲದಿದ್ದರೆ ನಿಮಗೂ ಮರಕಲ್ಲುಗಳಿಗೂ ಏನು ವೆತ್ಯಾಸ? ಅವೂ ಅಸ್ತಿತ್ವಕ್ಕೆ ಬರುತ್ತವೆ, ನಶಿಸಿ ನಿರ್ನಾಮವಾಗುತ್ತವೆ.


• ಪರಹಿತಕ್ಕಾಗಿ ನಿಮ್ಮ ಜೀವನವನ್ನು ಮುಡಿಪಾಗಿಡಿ. ನೀವು ತ್ಯಾಗಜೀವನವನ್ನು ಆರಿಸಿಕೊಳ್ಳುವುದಾದರೆ ಸೌಂದರ್ಯ, ಹಣ, ಅಧಿಕಾರಗಳ ಕಡೆ ತಿರುಗಿಯೂ ನೋಡಬೇಡಿ.


• ಎಲ್ಲವನ್ನೂ ದೂರ ಎಸೆಯಿರಿ. ನಿಮ್ಮ ಮುಕ್ತಿಯ ಬಯಕೆಯನ್ನು ಕೂಡ. ಇತರರಿಗೆ ಸಹಾಯಮಾಡಿ.


• ನಮಗೆ ತ್ಯಾಗ ಮಾಡುವ ಧೈರ್ಯ ಬೇಕಾದರೆ ನಾವು ಉದ್ವೇಗವಶರಾಗಕೂಡದು. ಉದ್ವೇಗ ಕೇವಲ ಪ್ರಾಣಿಗಳಿಗೆ ಸೇರಿದ್ದು. ಪ್ರಾಣಿಗಳು ಸಂಪೂರ್ಣವಾಗಿ ಉದ್ವೇಗದ ಅಧೀನದಲ್ಲಿರುವುವು.


• ಆದರ್ಶದಿಂದ ಕೂಡಿದ ವ್ಯಕ್ತಿ ಒಂದು ಸಾವಿರ ತಪ್ಪುಗಳನ್ನು ಮಾಡಿದರೆ, ಆದರ್ಶವಿಲ್ಲದ ವ್ಯಕ್ತಿಯು ಐವತ್ತು ಸಾವಿರ ತಪ್ಪುಗಳನ್ನು ಮಾಡುತ್ತಾನೆ. ಆದ್ದರಿಂದ ಆದರ್ಶವನ್ನು ಇಟ್ಟುಕೊಳ್ಳುವುದು ಒಳ್ಳೆಯದು.


• ಜೀವನವೆಂಬುದು ಕಠಿಣ ಸತ್ಯ. ಧೈರ್ಯವಾಗಿ ಅದನ್ನು ಎದುರಿಸಿ. ನಿಮ್ಮ ಮಾರ್ಗದಲ್ಲಿ ಮುಂದುವರೆಯಿರಿ. ಅದು ಅಭೇದ್ಯವಾಗಿರಬಹುದು. ಆದರೆ ಆತ್ಮ ಅದಕ್ಕಿಂತ ಬಲಯುತವಾದುದು.


• ಈ ಪ್ರಪಂಚ ಒಂದು ದೊಡ್ಡ ಗರಡಿ ಮನೆ. ನಾವಿಲ್ಲಿ ಬಲಿಷ್ಠರಾಗುವುದಕ್ಕೆ ಬಂದಿದ್ದೇವೆ.


• ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ.


• ಹೇಡಿಗಳು ಮಾತ್ರ, ಬಲಹೀನರು ಮಾತ್ರ ಪಾಪವನ್ನು ಮಾಡುವುದು ಮತ್ತು ಸುಳ್ಳನ್ನು ಹೇಳುವುದು ಎಂಬುದನ್ನು ನೆನಪಿನಲ್ಲಿಡಿ. ಧೀರರು ಯಾವಾಗಲೂ ನೀತಿವಂತರಾಗಿರುತ್ತಾರೆ. ಧೀರರಾಗಿ, ನೀತಿವಂತರಾಗಿ , ಸಹಾನುಭೂತಿಯುಳ್ಳವರಾಗಿ.


• ಸತ್ಯನಿಷ್ಠೆ, ಪವಿತ್ರತೆ ಮತ್ತು ನಿಸ್ವಾರ್ಥತೆ ಈ ಮೂರು ಯಾರಲ್ಲಿರುತ್ತದೆಯೋ ಅವರನ್ನು ಈ ಜಗತ್ತಿನ ಯಾವ ಶಕ್ತಿಯೂ ನಿಗ್ರಹಿಸಲಾರದು. ಇವುಗಳಿಂದ ಸಂಪನ್ನನಾದವನು ಇಡೀ ಜಗತ್ತಿನ ವಿರೋಧವನ್ನೇ ಎದುರಿಸಬಲ್ಲ.


• ಮೊದಲು ಚಾರಿತ್ರ್ಯವನ್ನು ಬೆಳೆಸಿ. ನೀವು ಮಾಡಬೇಕಾದ ಅತ್ಯುನ್ನತ ಕರ್ತವ್ಯ ಇದು.


• ಮನಸ್ಸನ್ನು ಶಕ್ತಿಯುತವೂ, ಶಿಸ್ತುಬದ್ದವೂ ಆಗಿಸುವುದರಲ್ಲಿಯೇ ಜ್ಞಾನದ ಮೌಲ್ಯವಿರುವುದು.


• ಉನ್ನತ ಆಲೋಚನೆಗಳಿಂದ, ಅತ್ಯುನ್ನತ ಆದರ್ಶಗಳಿಂದ ನಿಮ್ಮ ಮಿದುಳನ್ನು ತುಂಬಿ; ಅವುಗಳನ್ನು ಹಗಲಿರುಳೂ ನಿಮ್ಮ ಮುಂದಿರಿಸಿಕೊಳ್ಳಿ. ಇದರಿಂದ ಮಹತಕಾರ್ಯ ಉದ್ಭವಿಸುತ್ತದೆ.


• ನಿಮ್ಮ ಪಾಲಿಗೆ ಬಂದ ಕರ್ತವ್ಯವನ್ನು ಮಾಡಿ ನೀವು ಶುದ್ಧ ಚಾರಿತ್ರ್ಯವನ್ನು ರೂಢಿಸಿಕೊಳ್ಳಬೇಕು. ಕರ್ತವ್ಯವನ್ನು ಮಾಡಿದರೆ ಕರ್ತವ್ಯಭಾರದಿಂದ ಪಾರಾಗುತ್ತೇವೆ.


• ಪ್ರತಿಯೊಬ್ಬ ವ್ಯಕ್ತಿಯೂ, ಪ್ರತಿಯೊಂದು ರಾಷ್ಟ್ರವೂ ಶ್ರೇಷ್ಠತೆಯನ್ನು ಪಡೆಯಲು ಮೂರು ಸಂಗತಿಗಳು ಅವಶ್ಯಕ:
1.ಒಳಿತಿನ ಶಕ್ತಿಯಲ್ಲಿ ದೃಢನಂಬಿಕೆ
2.ಮಾತ್ಸರ್ಯ ಹಾಗೂ ಅಪನಂಬಿಕೆಗಳಿಲ್ಲದಿರುವಿಕೆ
3.ಒಳ್ಳೆಯವರಾಗಲು, ಒಳಿತನ್ನು ಮಾಡಲು ಪ್ರಯತ್ನಿಸುವವರಿಗೆ ಸಹಾಯ ಮಾಡುವಿಕೆ.


• ನಮಗೆ ನಾವೇ ಕೇಡನ್ನುಂಟುಮಾಡಿಕೊಳ್ಳದಿದ್ದರೆ, ಜಗತ್ತಿನ ಯಾವ ಶಕ್ತಿಯೂ ನಮಗೆ ಕೇಡನ್ನುಂಟುಮಾಡಲಾರದು ಎಂಬುದು ನಿಶ್ಚಯ.


• ನಮ್ಮ ದುಃಖಗಳಿಗೆಲ್ಲ ನಾವೇ ಜವಾಬ್ಧಾರರು. ಮತ್ತಾರೂ ಅಲ್ಲ. ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವವರು ನಾವೇ.


• ನಿಮಗಾಗಿ ಏನನ್ನೂ ಬಯಸಬೇಡಿ. ಎಲ್ಲವನ್ನೂ ಇತರರಿಗಾಗಿ ಮಾಡಿ. ಭಗವಂತನಲ್ಲೇ ಇರುವುದು ಅವನಲ್ಲೇ ಬಾಳುವುದು, ಚಲಿಸುವುದು ಎಂದರೆ ಇದೇ.


• ಯಾರ ಸಹಾಯಕ್ಕೂ ಕಾದು ಕುಳಿತುಕೊಳ್ಳಬೇಡಿ. ಎಲ್ಲ ಮಾನವ ಸಹಾಯಕ್ಕಿಂತಲೂ ಭಗವಂತನು ಅನಂತಪಾಲು ಮಿಗಿಲಲ್ಲವೆ?


• ಇತರರಿಗೆ ತಿಳಿಯದೆ ಅವರನ್ನು ನಿಂದಿಸುವುದು ಮಹಾಪರಾಧ ಎಂಬುದನ್ನು ತಿಳಿಯಿರಿ. ಇದನ್ನು ನೀವು ಸಂಪೂರ್ಣ ತ್ಯಜಿಸಬೇಕು.


• ನೀವು ದ್ವೇಷ ಮತ್ತು ಅಸೂಯೆಗಳನ್ನು ಹೊರಸೂಸಿದರೆ ಅವುಗಳು ಚಕ್ರಬಡ್ಡಿ ಸಮೇತ ನಿಮಗೇ ಹಿಂತಿರುಗುತ್ತವೆ. ಯಾವು ಶಕ್ತಿಯೂ ಅದನ್ನು ತಡೆಯಲಾರದು. ಒಮ್ಮೆ ನೀವು ಅವುಗಳನ್ನು ಚಲಿಸುವಂತೆ ಮಾಡಿದರೆ ಅದರ ದುಷ್ಪರಿಣಾಮವನ್ನು ನೀವು ಅನುಭವಿಸಲೇಬೇಕು. ನೀವಿದನ್ನು ನೆನಪಿನಲ್ಲಿಟ್ಟರೆ ದುಷ್ಕಾರ್ಯಗಳಿಂದ ಪಾರಾಗಬಹುದು.

12 ಕಾಮೆಂಟ್‌ಗಳು:

  1. ನಮ್ಮ ವ್ಯಕ್ತಿತ್ವವನ್ನೆ ಬದಲಾಯಿಸಲ್ಬಲ್ಲ ನುಡಿಮುತ್ತುಗಳು.... ಅದ್ಬುತ!

    ಪ್ರತ್ಯುತ್ತರಅಳಿಸಿ
  2. ಜಗತ್ತು ಮೆಚ್ಚುವ ನುಡಿಗಳು ಶ್ರೀ ವಿವೇಕಾನಂದರದು

    ಪ್ರತ್ಯುತ್ತರಅಳಿಸಿ
  3. ವಿವೇಕಾನಂದರೆಂದರೆ ಮಾನವಕುಲದ ಆತ್ಮ ಸಮುದ್ರದ ಪ್ರತಿಕಾ.

    ಪ್ರತ್ಯುತ್ತರಅಳಿಸಿ